- ಶ್ಯಾಮ್ ಎನ್. ಕಶ್ಯಪ್
ಸ್ವಾತಂತ್ರದ ನಂತರ ಭಾರತದಲ್ಲಿ ಎಂದೂ ಕಾಣದಂತಹ ಆರ್ಥಿಕ ಅಭಿವೃದ್ಧಿಯನ್ನು ನಾವು ನೋಡುತ್ತಿದ್ದೇವೆ. ದೇಶದ ಕೃಷಿವಲಯವೂ ಕೂಡ ಎಂದೂ ನೋಡಿರದ ದುಸ್ಥಿತಿಗೆ ಬಂದು ತಲುಪಿದೆ. ದುರದೃಷ್ಟವಶಾತ್, ಕರ್ನಾಟಕವು ಈ ವಿರೋಧಾಭಾಸಕ್ಕೆ ಹಿಡಿದ ಕನ್ನಡಿಯಂತಿದೆ. ಕ್ಷಿಪ್ರ ಆರ್ಥಿಕ ಪ್ರಗತಿ, ಅವನತಿಯತ್ತ ತಿರುಗಿರುವ ಕೃಷಿ, ಇವೆರೆಡೂ ಕೃಷಿಗೆ ಬೇಕಾದ ಬಹುಮುಖ್ಯ ನಿಯಮಿತ ಸಂಪನ್ಮೂಲವಾದ ಭೂಮಿಯನ್ನು ರೈತನಿಂದ ಕಸಿಯುತ್ತಿರುವುದು ಗಾಬರಿ ಹುಟ್ಟಿಸುವ ವಿಷಯ.
ಕರ್ನಾಟಕದಲ್ಲಿ ಕೃಷಿ ಭೂಮಿಯ ಸ್ವಾಧೀನದ ವಿರುದ್ಧ ರೈತರು ಮಾಡುತ್ತಿರುವ ಹೋರಾಟವನ್ನು ನಾವು ಪ್ರತಿನಿತ್ಯವೂ ನೋಡುತ್ತಿದ್ದೇವೆ. ಮಂಗಳೂರು, ಹಾಸನ, ಮೈಸೂರು, ಬೆಂಗಳೂರು, ರಾಮನಗರ, ದಾವಣಗೆರೆ ಹೀಗೆ ಹಲವೆಡೆ ರೈತರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಪ್ರಾಣಬಿಡುವ ಪರಿಸ್ಥಿತಿ ನಿರ್ಮಿತವಾಗಿದೆ. ಅಲ್ಲದೇ ರೈತರ ಜಮೀನಿಗೆ ನ್ಯಾಯಯುತ ಬೆಲೆ ಸಿಗದೇ ಇರುವುದು ಕೂಡ ರೈತರ ನೆಮ್ಮದಿ ಕೆಡಿಸಿದೆ. ಭೂಸ್ವಾಧೀನ ನೀತಿಯು ಒತ್ತಾಯಪೂರ್ವಕ, ಸುಸ್ಥಿರವಲ್ಲದ, ಜನತಂತ್ರಕ್ಕೆ ವಿರುದ್ಧವಾದ ಮತ್ತು ಉದ್ದಿಮೆ, ಖಾಸಗಿ ಕಂಪನಿ ಸ್ನೇಹಿ ಎಂಬ ವಾದಕ್ಕೆ ಶಕ್ತಿಯುತವಾದ ನಿದರ್ಶನಗಳು ಇಂದು ಲಭ್ಯ.
