ಸಮುದಾಯ ಮತ್ತು ಕೃಷಿ
ಭಾರತದ ಗ್ರಾಮೀಣಾಭಿವೃದ್ಧಿಯ ಇಂದಿನ ಘಟ್ಟದಲ್ಲಿ 'ಸಮುದಾಯ'ಕ್ಕೆ ವಿಶೇಷ ಮಹತ್ವ ಸಿಕ್ಕಿದೆ. ಗ್ರಾಮಪಂಚಾಯತ್ಗಳ ಚಟುವಟಿಕೆಗಳಲ್ಲಿ ಮತ್ತು ಎನ್.ಜಿ.ಓ ಮತ್ತಿತರ ಅಭಿವೃದ್ಧಿ ಸಂಸ್ಥೆಗಳಲ್ಲಿ 'ಸಮುದಾಯಾಧಾರಿತ' ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಒತ್ತು ಸಿಗುತ್ತಿರುವುದು, ಹೆಚ್ಚಿನ ಯೋಜನೆಗಳೆಲ್ಲವೂ ಸಮುದಾಯಾಧಾರಿತವಾಗಿರುವುದನ್ನು ಓದುಗರು ನೋಡಿರಬಹುದು. ಬಹಳಷ್ಟು ಯೋಜನೆಗಳು ಹೀಗೆ ಸಮುದಾಯದ ಮಂತ್ರವನ್ನು ಏಕೆ ಹಿಡಿಯುತ್ತಿವೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸಣ್ಣದೊಂದು ಸಮಾಜದ ಸಮಗ್ರ ಒಳಿತನ್ನು ಒಬ್ಬ ನಾಯಕ ಅಥವ ಒಂದು ಸಣ್ಣ ಗುಂಪು ಯಶಸ್ವಿಯಾಗಿ, ಸುಸ್ಥಿರವಾಗಿ ಕಾಯ್ದುಕೊಳ್ಳಲಾಗುವುದಿಲ್ಲ ಎಂಬುದನ್ನು ಹಲವು ಉದಾಹರಣೆಗಳಲ್ಲಿ ನಾವು ನೋಡಿದ್ದೇವೆ. ಈ ಪರಿಸ್ಥಿತಿಯಲ್ಲಿ ಒಂದು ಸಮುದಾಯವು ಎಲ್ಲರ ಒಳಿತನ್ನು ಬಯಸಿ, ತನ್ನ ಬೆಳವಣಿಗೆಯನ್ನು ತಾನೇ ನಿರ್ಧರಿಸಿ, ತಾನೇ ನಿಯಂತ್ರಿಸಿಕೊಳ್ಳುವ ಪರ್ಯಾಯ ವ್ಯವಸ್ಥೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯಗಳ ರಚನೆ ಹೇಗಾಗುತ್ತದೆ, ಸಮುದಾಯದೊಳಗೆ ಜನರ ವೈಯುಕ್ತಿಕ ಧ್ಯೇಯಗಳು, ಸಮುದಾಯದ ಗುರಿಗಳು ಇವುಗಳ ಸಮನ್ವಯ ಹೇಗೆ ಸಾಧಿಸುವುದು; ಹೀಗೆ ಹಲವು ವಿಷಯಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯುತ್ತಿದೆ. ಸಮುದಾಯ ನಿಯಂತ್ರಿತ ಅರಣ್ಯ/ನಿಸರ್ಗಸಂರಕ್ಷಣೆ, ನೈಸರ್ಗಿಕ ಕೃಷಿ, ಸಾಲ ವಿಲೇವಾರಿ, ನ್ಯಾಯ ಪಂಚಾಯ್ತಿ ಹೀಗೆ ಹಲವು ಸಫಲತೆಯ ಉದಾಹರಣೆಗಳು ನಮ್ಮ ಕಣ್ಮುಂದಿವೆ.ಸಮುದಾಯಗಳ ವ್ಯವಸ್ಥಿತ ಕಾರ್ಯಾಚರಣೆಯಿಂದ ಹೇಗೆ ಇಡೀ ಗ್ರಾಮಕ್ಕೇ ಒಳಿತಾಗಬಹುದು ಎಂಬುದನ್ನು ಹಲವು ಸಂಶೋಧನೆಗಳು ತೋರಿಸುತ್ತಲೇ ಬಂದಿವೆ.
ಕೃಷಿಗೆ ಸಂಬಂಧಿತವಾಗಿ ಸಮುದಾಯದ ಪ್ರಾಮುಖ್ಯತೆಯನ್ನು ನಾವು ತಿರುಗೆ ನೋಡುವ ಪರಿಸ್ಥಿತಿ ಈಗ ಉಧ್ಬವವಾಗಿದೆಯೆಂದು ನನಗನಿಸುತ್ತದೆ. ಕೆರೆಯ ನೀರನ್ನು ಹಂಚಿಕೊಳ್ಳುವುದು, ಜಗಳ ತಗಾದೆಗಳನ್ನು ಪರಿಹರಿಸುವುದರಿಂದ ಹಿಡಿದು, ಕೃಷಿ ಕಾರ್ಮಿಕರು, ಕೃಷಿ ಸಲಕರಣೆಗಳನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಳ್ಳುವುದರ ತನಕ, ಕೃಷಿಗೆ ಸಂಬಂಧಪಟ್ಟಂತೆ ಸಮುದಾಯದ ಪಾಲು ಅಗಾಧ. ಪ್ರಕೃತಿಯ ಪ್ರತಿಕೂಲ ಪರಿಸ್ಥಿತಿಯಿಂದಲೋ ಅಥವ ಯಾರಿಗೋ ಒಬ್ಬರಿಗಾದ ನಷ್ಟವೋ ಹೀಗೆ ತೊಂದರೆಗಳೆದುರಾದಾಗ, ವ್ಯಕ್ತಿಗೆ ಸಮುದಾಯವು ತಕ್ಕ ಮಟ್ಟಿಗೆ ಸಹಾಯಹಸ್ತ ನೀಡಿದ ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಪಾರಂಪರಿಕವಾಗಿ ಸಮುದಾಯಗಳಲ್ಲಿದ್ದ 'saftey net'ಗಳನ್ನು ನೋಡುತ್ತಲೇ ಅದರಲ್ಲಿದ್ದ ಒಡಕುಗಳ ಬಗ್ಗೆಯೂ ಸಾಕಷ್ಟು ಗಮನಹರಿಸಬೇಕಿದೆ. ಇದರ ಜೊತೆಜೊತೆಗೆ, ಸಮುದಾಯದ ಹೆಸರಿನಲ್ಲಿ ಜಾತಿ, ಮತ, ಮೇಲು ಕೀಳು, ಇಂತಹ ವಿಭಜನೆ, ಶೋಷಣೆಗಳು ನಡೆದದ್ದು, ನಡೆಯುತ್ತಿರುವುದೂ ನಮಗೆ ತಿಳಿಯದಿದ್ದೇನಲ್ಲ. ಈ ಮಟ್ಟಿಗೆ ಸಮುದಾಯವು ತೀವ್ರವಾಗಿ ಒಡೆದಿರುವುದನ್ನು ನಾವು ನೋಡಿದ್ದೇವೆ.ಇಂದು ನೋಡಿದರೆ, ಈ ಸಮುದಾಯಗಳ ಪರಸ್ಪರ ಸಹಾಯದ ಮನೋಭಾವಗಳು ಹೋಗಿ, ಕೇವಲ ಈ ಒಡಕುಗಳೇ ಕಾಣುತ್ತವೆ. ಕೆರೆಗಳ ಅಕ್ರಮ ಸ್ವಾಧೀನ, ಅಭಿವೃದ್ಧಿ ಯೋಜನೆಗಳ ದುರುಪಯೋಗ ಹೀಗೆ ಹತ್ತು ಹಲವು ದೋಷಗಳು ಸಮುದಾಯ ಎಂಬ ಹೆಸರಿಗೇ ಕಳಂಕ ತಂದಿವೆ. ಸಮುದಾಯಗಳಲ್ಲಿರುವ ಒಳ್ಳೆಯ ಅಂಶಗಳನ್ನು ಕಾದುಕೊಂಡೇ ಅದರಲ್ಲಿರುವ ಅವಗುಣಗಳನ್ನು ಸರಿಪಡಿಸಿಕೊಳ್ಳುವ ಆಸೆ ಸಮುದಾಯಗಳಲ್ಲಿ ಬತ್ತಿಹೋದಂತಿದೆ.
ಜೇಮ್ಸ್ ಮಾನರ್ ಎಂಬ ಸಂಶೋಧಕರು ಹೇಳುವಂತೆ,ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ, ಕರ್ನಾಟಕದಲ್ಲಿಂದು ಮೇಲು-ಕೀಳು ಎಂಬ ಭಾವನೆಗಳು ಹೆಚ್ಚಾಗಿ ಉಳಿಯದಿದ್ದರೂ, ಸಮುದಾಯದ ವಿವಿಧ ವರ್ಗಗಳು ಮಾತ್ರ ಒಟ್ಟುಗೂಡಿಲ್ಲ, ವೈಷಮ್ಯ, ಅರಾಜಕತೆ ಬೆಳೆಯುತ್ತಲೇ ಇದೆ. ಇದಕ್ಕೆ ಈ ಉಪವರ್ಗಗಳಲ್ಲಿ ಸಮುದಾಯದ ಮೇಲಿರುವ ಬೆಲೆ ನಂಬಿಕೆ ಇವೆರೆಡೂ ಕಳಚಿಹೋಗಿರುವುದೇ ಕಾರಣವೆನ್ನಬಹುದು. ಇಂದು, ಒಬ್ಬ ವ್ಯಕ್ತಿಯು ತನ್ನೊಟ್ಟಿಗೆ, ತನ್ನ ಜೊತೆಯಿರುವ ಗ್ರಾಮಸ್ಥರಿಗಿಂತ ಮಿಗಿಲಾಗಿ, ಮೇಲೆಲ್ಲೋ ಇರುವ ರಾಜಕಾರಣಿಯೋ, ಪುಂಡನೋ ಹೆಚ್ಚು ನಂಬಿಕಸ್ಥನಾಗಿದ್ದಾನೆ. ಈ ಪರಿಸ್ಥಿತಿಯಲ್ಲಿ ಸಮುದಾಯವೆಂದರೆ ಕೇವಲ ತಮ್ಮ ವೈಯುಕ್ತಿಕ ಅಗತ್ಯಗಳನ್ನು ಹೇಗಾದರೂ ಮಾಡಿ ಪೂರೈಸಿಕೊಳ್ಳುವ ಸಾಧನವಾಗಿ ಹೋಗಿದೆ. ಪೇಟೆಗಳಂತೆಯೇ ಹಳ್ಳಿಯ ಜೀವನವೂ ಸಮುದಾಯ ಕೇಂದ್ರಿತವಾಗಿ ಉಳಿಯದೇ ವ್ಯಕ್ತಿ-ಕೇಂದ್ರಿತವಾಗುತ್ತಿದೆ.
ಸಮುದಾಯದ ಈ ಒಡಕುಗಳಿಂದ ರೈತನಿಗೆ ಸಾಕಷ್ಟು ತೊಂದರೆಯಾಗಿದೆ.ಹಳ್ಳಿಯಲ್ಲಿ ಇರುವ ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳುವ ಮಾರ್ಗವೇ ಉಳಿದಿಲ್ಲ. ಭೂ-ಕಬಳಿಕೆ, ಅಕ್ರಮ ವಸ್ತುಗಳ ತಯಾರಿಕೆ, ಇದರಿಂದ ಸುತ್ತಮುತ್ತಲಿನ ರೈತರಿಗೆ ಆಗುವ ತೊಂದರೆ, ಬೇಕೆಂದರೂ, ಊರಿನಲ್ಲಿ ಪರಿಣತರಿದ್ದರೂ ಸಿಗದಿರುವ ಸಲಹೆ, ಮರೆಯಾಗುತ್ತಿರುವ ಜಾನಪದ ಜ್ಞಾನ.. ಇವ್ಯಾವುದಕ್ಕೂ ಸಮುದಾಯವು ದಕ್ಷತೆಯಿಂದ ಪ್ರತಿಸ್ಪಂದಿಸಲು ಸಾಧ್ಯವಾಗಿಲ್ಲ. ಇನ್ನು,ಗ್ರಾಮೀಣಾಭಿವೃದ್ಧಿಯಲ್ಲಿ ಸಮುದಾಯದ ಪಾಲನ್ನು ಹೆಚ್ಚಿಸಲು, ಪಂಚಾಯ್ತಿಗಳಿಗೆ ವಿವಿಧ ಯೋಜನೆಗಳಡಿ ಬರುವ ಸವಲತ್ತುಗಳು ಬೇಕಾಬಿಟ್ಟಿ ಪೋಲಾಗುತ್ತಿದ್ದರೂ, ಸಮುದಾಯಗಳಿಗೆ ಇದರ ಸದುಪಯೋಗಪಡಿಸಿಕೊಳ್ಳುವ ಶಕ್ತಿಯು ಉಳಿದಿಲ್ಲ. ತೀರ ಸಣ್ಣ ಸಣ್ಣ ಜಗಳಗಳಿಗೂ, ಪರಸ್ಪರ ಅಪನಂಬಿಕೆಗಳಿಂದಾಗಿ ರೈತ ಕೋರ್ಟು ಕಛೇರಿಗಳನ್ನಲೆಯುವಂತಾಗಿದೆ. ಇವೆಲ್ಲವೂ, ರೈತನನ್ನು ಇನ್ನೂ ದುರ್ಬಲನನ್ನಾಗಿಸಿವೆ, ಹತಾಶನನ್ನಾಗಿಸಿವೆ. ಇದರ ಉಪಯೋಗವನ್ನು ಅಧಿಕಾರಶಾಹಿಗಳು, ರಾಜಕಾರಣಿಗಳು ಮತ್ತು ಖಾಸಗಿ ಕಂಪನಿಗಳು ವ್ಯವಸ್ಥಿತವಾಗಿ ಪಡೆದಿವೆ. ರೈತನೊಬ್ಬ ಇವರ ಬುಟ್ಟಿಗೆ ಬೀಳುತ್ತಿದ್ದರೂ, ಗೊತ್ತಿದ್ದೂ ಗೊತ್ತಿದ್ದೂ ಇಡೀ ಊರೇ ಮೌನದಿಂದ ನೋಡಿ ಸುಮ್ಮನಾಗಿದೆ.
ರೈತನಿಗಾಗಲೀ ಇನ್ಯಾವುದೇ ಗ್ರಾಮಸ್ಥನಿಗಾಗಲೀ ಸ್ವಂತವಾಗಿ ಇಂದಿನ ಮುಕ್ತ ಆರ್ಥಿಕ ವ್ಯವಸ್ಥೆಯನ್ನು ಎದುರಿಸುವ ಶಕ್ತಿ ಬಂದಿಲ್ಲ. ಇದನ್ನು ಒಗ್ಗೂಡಿಸಿಕೊಳ್ಳಲು ಕಲಿಯುತ್ತಲೇ, ಅವನಿಗೆ ಆಧಾರವಾಗಿ, ರಕ್ಷಣೆಗಾಗಿ ತನ್ನದೇ ಆದ ಜನತಾಂತ್ರಿಕ ಸಮುದಾಯ,ಅದರ ಅರ್ಥವತ್ತಾದ ಕಾರ್ಯಾಚರಣೆ ಅತ್ಯಗತ್ಯ.






Recent comments
11 weeks 2 days ago
11 weeks 3 days ago
1 year 4 weeks ago
1 year 4 weeks ago
1 year 8 weeks ago
1 year 8 weeks ago